Sunday 18 June 2017

ಕನಸು ಕಾಣಲು ಕಾಸು ಕೊಡಬೇಕಾಗಿಲ್ಲ

 ಕನಸು ಕಾಣಲು ಕಾಸು ಕೊಡಬೇಕಾಗಿಲ್ಲ

(ಜನಮಾಧ್ಯಮದಲ್ಲಿ ಪ್ರಕಟ)

       'ಅತೀ ದೊಡ್ಡ ಕನಸನ್ನು ಕಾಣುವುದು ಖಂಡಿತ ಅಪರಾಧವಲ್ಲ..ಆದರೆ ಕನಸನ್ನೇ ಕಾಣದಿರುವುದು ಮಾತ್ರ ಮಹಾಪರಾಧ' ಎನ್ನುತ್ತದೆ ಒಂದು ಸಂಶೋಧನೆ.. ಕೆಲವರು ಅಂದುಕೊಳ್ಳುತ್ತಾರೆ ಕನಸೇ ಬೇರೆ,ಗುರಿಯೇ ಬೇರೆಯೆಂದು,ಆದರದು ಸತ್ಯವಲ್ಲ.ಗುರಿ ಮತ್ತು ಕನಸು ಒಂದೇ ನಾಣ್ಯದ ಎರಡು ಮುಖಗಳಂತೆ.ಕನಸು ಸಾಕಾರವಾದರೆ ಗುರಿ ತಲುಪಿದಂತೆ,ಗುರಿ ಮುಟ್ಟಿದರೆ ಕನಸು ನನಸಾದಂತೆ.ಹಾಗೇ ನೋಡಿದರೆ ನಾವು ಕಾಣುವ ಸುಂದರ ಕನಸುಗಳೇ ಬದುಕಲ್ಲಿ ಜೀವಸೆಲೆ ಚಿಮುಕಿಸುವುದು.ಕನಸು ಕಾಣದವ ಅರ್ಧ ಸತ್ತ ಹಾಗೆ ಎಂದು ಮಾತಿದೆ.ಕಂಡ ನೂರು ಕನಸಲ್ಲಿ ಒಂದು ಕನಸು ನನಸಾದರೂ,ಆಗ ನಮಗಾಗುವ ಆತ್ಮತೃಪ್ತಿ,ಸಂತಸಕ್ಕೆ ಪಾರವಿರುವುದೇ? ಅಂದರೆ ಕನಸು ಕಾಣುತ್ತಾ,ಅದನ್ನು ಸಾಕಾರಗೊಳಿಸುವತ್ತ ಹೆಜ್ಜೆಯಿಟ್ಟರೆ,ಜೀವನದಲ್ಲಿ ಅದೇಷ್ಟು ಜೀವಂತಿಕೆ ತುಂಬಬಹುದು ಯೋಚಿಸಿ.
      ಜೀವನದಲ್ಲಿ ಕಂಡ ಕನಸೆಲ್ಲಾ ನನಸಾಗಬೇಕೆಂದಿಲ್ಲ.ಆದರೆ ಕೊನೆಪಕ್ಷ ಕನಸಿನ ಸಮೀಪವಂತೂ ಕರೆದೊಯ್ಯುವುದಂತೂ ಸತ್ಯ. ಉದಾಹರಣೆಗೆ ನೀವು 'ಆಕಾಶಕ್ಕೆ ಏಣಿ ಹಾಕಿ ಚಂದ್ರನ ಮುಟ್ಟಿ ಬರುವೆನೆಂದು' ಕನಸು ಕಾಣುವಿರೆಂದಿಟ್ಟುಕೊಳ್ಳಿ,ಚಂದ್ರಲೋಕಕ್ಕೆ ಏಣಿಯಲ್ಲಿ ತಲುಪುವ ಕನಸು ನನಸಾಗದಿದ್ದರೂ,ವಿಮಾನದಲ್ಲಿ ಚಂದ್ರ-ತಾರೆಗಳ ನಡುವೆ ಹಾಯ್ದು ಹೋಗುವ ಅವಕಾಶವಾದರೂ ಬರಬಹುದು.ಅದಕ್ಕೆ ಕನಸು ಕಾಣಿರಿ,ಕನಸಿಗೆ ಯಾವ ಇತಿಮಿತಿಯೂ ಇಲ್ಲ, ಕನಸಿಗೆ ಸುಂಕವೂ ತೆರಬೇಕಾಗಿಲ್ಲ..ಇದರರ್ಥ ಬರೀ ಕನಸು ಕಾಣುತ್ತಾ,ಮನಸ್ಸಲ್ಲೇ ಮಂಡಿಗೆ ತಿಂದರೆ ರುಚಿ ತಿಳಿಯುವುದಿಲ್ಲ. ಕನಸು ಕಾಣುತ್ತಲೇ,ಅದನ್ನು ಸಾಕಾರಗೊಳಿಸುವತ್ತ ಸ್ವಲ್ಪ ಪ್ರಯತ್ನಿಸಿ. ಆಗ ನೋಡಿ ನಿಮ್ಮ ಕನಸಿಗೆ ಅದೇಷ್ಟು ಅಗಾಧ ಶಕ್ತಿಯಿದೆಯಂದು..
   ಕಳೆದ ವರ್ಷ ನೇಮಿಚಂದ್ರರ 'ಬದುಕ ಬದಲಿಸಬಹುದು' ಎಂಬ ಪುಸ್ತಕ ಓದುತ್ತಿದ್ದೆ.ಕನಸು ಕಾಣುವುದು ಹೇಗೆ ಎಂದು ಅತ್ಯಂತ ಸರಳವಾಗಿ ವಿವರಿಸಿದ್ದಾರೆ.ಅವರೇ ಪುಸ್ತಕದಲ್ಲಿ ಬರೆದುಕೊಂಡಂತೆ ನಿಮಗೆ ಪುರಸೊತ್ತಾದಾಗ ಕನಸಿನ ಪಟ್ಟಿ ಮಾಡಿಟ್ಟುಕೊಳ್ಳಿ,ಸಾಕಾರವಾದ ಕನಸಿನ ಮುಂದೆ ಟಿಕ್ ಮಾರ್ಕ್ ಹಾಕಿಡಿ ಎಂದು.ನಾನೂ ಇದನ್ನು ಸ್ವತಃ ಪ್ರಯೋಗ ಮಾಡಿನೋಡಿದ್ದೆನೆ.ನನ್ನ ಕನಸಿನ ನೂರಾರು ಪಟ್ಟಿಯಲ್ಲಿ,ಕೆಲವೊಂದು ಈಡೇರಿದಾಗ ಆಗುವ ತೃಪ್ತಿಯಿದೆಯಲ್ಲಾ,ಅದನ್ನು ಬಹುಷಃ ಜಗತ್ತಿನ ಇನ್ಯಾವುದೇ ವಸ್ತುವೂ ಕಟ್ಟಿಕೊಡದು. ಕೆಲವೊಮ್ಮೆ ಮನಸ್ಸಿಗಾದ ಒಂದು  ಸಣ್ಣ ಕಿರಿಕಿರಿಯಿಂದಾಗಿ,ಮನ ಮುದುಡಿ ಕುಳಿತಿರುತ್ತದೆ.ಆಗ ನಿಮ್ಮ ಕನಸಿನ ಪಟ್ಟಿಯನ್ನು ತೆಗೆದುನೋಡಿ,ಕ್ಷಣದಲ್ಲಿ ಅದ್ಯಾವ ಜಾದೂ ಮಾಡಿ ನಿಮಗೆ ಆಹ್ಲಾದದ ಅನುಭವ ತಂದುಕೊಡುತ್ತದೆಯೆಂದು. 
  ಮುಪ್ಪಿನ ಷಡಕ್ಷರಿಯವರು ಬರೆದ 'ತಿರುಕನ ಕನಸು'ಪದ್ಯವನ್ನು ಬಾಲ್ಯದಿಂದಲೇ ಕೇಳಿ ಬೆಳೆದಿದ್ದೆವೆ. "ತಿರುಕನೊರ್ವನೂರ ಮುಂದೆ ಮುರುಕು ಧರ್ಮಶಾಲೆಯಲ್ಲಿಒರಗಿರುತ್ತಲೊಂದು ಕನಸ ಕಂಡನೆಂತೆನೆ" ಎಂದು ತಿರುಕನ ಕನಸು ಬಿಚ್ಚಿಕೊಳ್ಳುವ ಪರಿಯಿದೆಯಲ್ಲಾ,ಅದು ವರ್ಣಿಸಲಾದುದು. ಪುರದ ರಾಜ ಸತ್ತು ಅವನ ರಾಜಕುವರಿಯನ್ನು ತಾನೇ ವರಿಸಿ,ಅವಳಿಂದ ಮಕ್ಕಳನ್ನು ಪಡೆದು, ಆ ಮಕ್ಕಳ ಮದುವೆಯನ್ನೂ ಮಾಡಿ,ಧನಬಲ-ಜನಬಲದಿಂದ ಮೆರೆಯುತ್ತಿದ್ದಾಗ,ಯಾರೋ ತನ್ನ ಮುರುಕು ಧರ್ಮಶಾಲೆಗೆ ನುಗ್ಗಿದಂತೆನೆಸಿ ಅವ ಕಣ್ಣು ತೆರೆಯುವಾಗ ಕನಸು ಮುಗಿದಿರುತ್ತದೆ.ಆದರೆ ನನ್ನ ದೃಷ್ಟಿಕೋನದ ಪ್ರಕಾರ ಕನಸು ಮುಗಿದಿರಬಹುದು,ಆದರೆ ಆ ತಿರುಕನ ಕನಸನ್ನು ನನಸಾಗಿಸಲೇ ಆ ನೃಪರು ಬಂದಿರಬಹುದಲ್ಲಾ?ಕನಸನ್ನು ಸಾಕಾರಗೊಳಿಸಲೆಂದೇ ಅವ ನಿದ್ದೆಯಿಂದ ಎಚ್ಚಿತ್ತಿರಬಹುದಲ್ಲಾ?ಮುಂದಿನ ಊಹೆ ಅವರವರ ಭಾವಕ್ಕೆ-ಭಕುತಿಗೆ..
     ಜಗತ್ತಿನಲ್ಲಿ ಯಾರೂ ಕನಸು ಕಾಣುವುದಿಲ್ಲಾ ಹೇಳಿ? ಮನುಷ್ಯನಾದಿಯಾಗಿ,ಮೂಕಪ್ರಾಣಿಗಳೂ ಕನಸು ಕಾಣುತ್ತವೆ.ಮನುಷ್ಯ ಆಸ್ತಿ-ಅಂತಸ್ತು,ಆಕಾಶ-ಭೂಮಿಯೆಂದು ಕನಸು ಕಂಡರೆ, ಮುಗ್ಧ ಮೂಕಪ್ರಾಣಿಗಳು ತಮ್ಮ ಒಡೆಯ,ಮೇವು,ಆಹಾರವೆಂದು ಕನಸು ಕಾಣುತ್ತವೆ.ಕನಸು ಕಾಣುವುದು ಖಂಡಿತ ತಪ್ಪಲ್ಲ,ಆದರೆ ಒಳ್ಳೆಯ ಕನಸು ಕಾಣಿರಿ.ಒಳ್ಳೆಯ ಕನಸು ಕಾಣುವುದು ಜೀವನದಲ್ಲಿ ಧನಾತ್ಮಕ ಅಂಶವನ್ನು ವೃದ್ಧಿಸಿ,ಹೊಸಹುರುಪು ಕಟ್ಟಿಕೊಟ್ಟು,ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.ಅದೇ ಬೇರೆಯವರಿಗೆ ಕೆಟ್ಟದಾಗುವ ಮನೆಮುರುಕ ಕನಸು ಕಂಡರೆ,ಅದರಿಂದ ಋಣಾತ್ಮಕ ಅಂಶಗಳು ಹೆಚ್ಚಾಗಿ ಜೀವನ ಅಂಧಕಾರದತ್ತ ಜಾರತೊಡಗುತ್ತದೆ.ಇದನ್ನು ಯೋಚಿಸಿ ಕನಸು ಕಾಣಿರಿ.

    ಯಾರೂ ಹುಟ್ಟುತ್ತಲೇ ಯಶಸ್ಸನ್ನು ಬೆನ್ನಿಗಂಟಿಸಿಕೊಂಡು ಬರುವುದಿಲ್ಲ.ಇವತ್ತಿನ ದಿನ ಅವರು ಯಶಸ್ವಿಯಾಗಿದ್ದಾರೆ ಅಂದರೆ ಅದಕ್ಕೆ ಅವರು ಕಂಡ ಕನಸು,ಅದನ್ನು ಸಾಕಾರಗೊಳಿಸುವತ್ತ ಅವರ ಪರಿಶ್ರಮವೇ ಮುಖ್ಯ ಕಾರಣವಾಗಿರುತ್ತದೆ.ಕನಸು ಕಾಣದೇ ಇದ್ದರೆ ಮುಂದೊಂದು ದಿನ ಬದುಕು ಎಕತಾನತೆಯಿಂದ ಬರಡಾದೀತು,ಮನಸ್ಸು ಮೂಕವಾದೀತು.ಬದುಕಲ್ಲಿ ಸ್ವಾರಸ್ಯವಿರಬೇಕೆಂದರೆ, ಪ್ರಗತಿಯಿರಬೇಕೆಂದಿದ್ದರೆ,ಆತ್ಮತೃಪ್ತಿ-ಆತ್ಮವಿಶ್ವಾಸದಿಂದ ಕೂಡಿರಬೇಕಂದರೆ ಕನಸು ಕಾಣಲೇಬೇಕು.
  ಕೊನೆಯದಾಗಿ ಇದನ್ನು ಹೇಳಲೇಬೇಕು,ಕನಸಿಗೂ ವಾಸ್ತವಕ್ಕೂ ವ್ಯತ್ಯಾಸದ ಅರಿವಿದ್ದರೆ ಉತ್ತಮ.ಯಾಕೆಂದರೆ ಕನಸಿಗೆ ಯಾವ ಪರಿಶ್ರಮವೂ ಬೇಡ,ಅದೇ ಕನಸನ್ನು ವಾಸ್ತವವಾಗಿಸಲು ತುಂಬಾ ತಾಳ್ಮೆ,ಪರಿಶ್ರಮ ಅತ್ಯಗತ್ಯ.ಉದಾಹರಣೆಗೆ:"ಈ ವರ್ಷ ನೀವು ಸಿಂಗಾಪೂರಕ್ಕೆ ಪ್ರವಾಸ ಹೋಗಬೇಕೆಂದು ಕನಸು ಕಾಣುತ್ತಾ ಕುಳಿತುಕೊಂಡರೆ,ನಿಮ್ಮನ್ನು ಅಲ್ಲಾದ್ದೀನ್ ಕಾರ್ಟೂನಿನಲ್ಲಿ ಬರುವ ಜೀನಿ ನಿಮ್ಮನ್ನು ಸಿಂಗಾಪೂರಕ್ಕೆ ಕರೆದೊಯ್ಯುವುದಿಲ್ಲ.ಆ ಕನಸು ಸಾಕಾರವಾಗಬೇಕಾದರೆ ವೀಸಾ,ಹಣ,ಸಮಯವನ್ನೆಲ್ಲಾ ನೀವು ಸಿದ್ಧಪಡಿಸಿಕೊಂಡಿರಲೇ ಬೇಕು." ಹೀಗೆಯೆ ಬರೀ ಕನಸಷ್ಟೇ ಕಾಣುತ್ತಾ ಕುಳಿತುಕೊಳ್ಳದೇ,ಅದನ್ನು ನನಸಾಗುವತ್ತಲೂ ಪ್ರಯತ್ನ ಪಡಿ.ಕನಸು ಕಾಣುತ್ತಲೇ ಇರಿ,ಕನಸು ಕಾಣಲು ಯಾವ ಕಾಸು ಕೊಡಬೇಕಾಗಿಲ್ಲ.
-ಶುಭಶ್ರೀ ಭಟ್ಟ,ಬೆಂಗಳೂರು

No comments:

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...