ಮನತಾಕಿದ ಅಕ್ಕು ನಾಟಕ
ನಾನು ವೈದೇಹಿಯವರ ಅಭಿಮಾನಿ ಓದುಗಳು,ಅವರ ಕಥೆಗಳಲ್ಲಿ ಬರುವ ಪ್ರತೀ ಪಾತ್ರಗಳು ಮನದಲ್ಲಿ ಅಚ್ಚೊತ್ತಿಬಿಡುವಂತಿರುತ್ತವೆ.ವೈದೇ
ಮದುವೆಯೆಂಬ ಬಂಧನದಲ್ಲಿ ಸಿಲುಕಿದ ಹೆಣ್ಣೊಬ್ಬಳು ಪತಿಯಿಂದ ಪರಿತ್ಯಕ್ತೆಯಾಗಿ ತವರು ಮನೆಗೆ ನೂಕಲ್ಪಡುತ್ತಾಳೆ. ತಾನು,ತನ್ನ ಗಂಡ,ತಮಗೊಂದು ಮುದ್ದು ಮಗು,ಈ ಪುಟ್ಟ ಸಂಸಾರದ ಆಸೆ,ಹರೆಯದ ನೂರುಕನಸ ಹೊತ್ತು ಪಯಣಿಸುತ್ತಿದ್ದವಳಿಗೆ ಧಿಡೀರ್ ಆಘಾತ ತಡೆದುಕೊಳ್ಳಲಾಗದೇ ಅರೆಹುಚ್ಚಿಯಾಗಿಬಿಡುತ್ತಾಳೆ. ಸಮಾಜದ ಕುಟುಂಬದ ನಿಂದನೆಗಳಿಗೆ ಕಿವಿಗೊಟ್ಟು ರೋಸಿ ಜಿಗುಪ್ಸೆಯಿಂದ ತಲೆಕೆಟ್ಟು ಅರೆಹುಚ್ಚಿಯಾಗಿಯೇ ಉಳಿದವರಿಗೂ ಪಾಠ ಹೇಳುವಂತ ಹೆಣ್ಣುಮಗಳೇ ಈ ಅಕ್ಕು. 'ಅಕ್ಕು'ವಿನ ಪಾತ್ರದಲ್ಲಿ ಚಂಪಾ ಶೆಟ್ಟಿಯವರು ಅದೇಷ್ಟು ಅಲೌಕಿಕ ಅನುಭವ ಕಟ್ಟಿಕೊಟ್ಟಿದ್ದಾರೆಂದರೆ,ಅವರ ಪಾತ್ರ ಪರಿಚಯವಾಗುವಾಗ ನೆರೆದ ಪ್ರೇಕ್ಷಕರ ಕಿವಿಗಡಚಿಕ್ಕುವ ಚಪ್ಪಾಳೆಯೇ ಸಾಕ್ಷಿಯಾಗಿತ್ತು.
ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ,ಹುಟ್ಟಿದಾರು ತಿಂಗಳಿಗೆ ತಬ್ಬಲಿಯಾಗಿ ಪರರ ಆಶ್ರಯದಲ್ಲಿ ಬೆಳೆದು,ಮದುವೆಯೂ ಆಗಿ ವರುಷದೊಳಗೇ ವಿಧವೆಯಾದ ಹೆಣ್ಣುಮಗಳ ಕೈಯಲ್ಲಿ ಮಲ್ಲಿಗೆಯೆಸಳಂತ ಮುದ್ದುಗೊಂಬೆ. ಯೌವನದ ಹಸಿವು-ಬಾಯಾರಿಕೆಗಳನ್ನೆಲ್ಲಾ ಹರೆಯದಲ್ಲೇ ಬಲಿಕೊಟ್ಟು,ಮುಂದಿನ ಜೀವನವನ್ನೂ-ಜೀವವನ್ನೂ ಮಗಳಿಗಾಗಿ ನಂತರದ ದಿನದಲ್ಲಿ ಮೊಮ್ಮಗಳಿಗಾಗಿ ಕೈಯಲ್ಲಿ ಹಿಡಿದು,ಸಮಾಜದ ವ್ಯಂಗ್ಯಕ್ಕೆಲ್ಲಾ ಬೆಲೆಕೊಡದೇ, ಬೇರೆಯವರ ಆಶ್ರಯದಲ್ಲಿ ಅಕ್ಷರಶಃ ಕೆಲಸದಾಳಾಗಿ ದುಡಿಯುತ್ತಿರುವ ಅಜ್ಜಿಯ ಪಾತ್ರವೇ 'ಪುಟ್ಟಮ್ಮತ್ತೆ'. ಈ ಪಾತ್ರದಲ್ಲಿ ಅಮೋಘ ಅಭಿನಯ ನೀಡಿದವರು 'ರಾಧಾಕೃಷ್ಣ ಉರಾಳ'ರು. ಈ ಪಾತ್ರ ಪರಿಚಯ ಮಾಡಿದಾಗ ನನಗೆ ನನ್ನ ಕಿವಿಯನ್ನೇ ನಂಬಲಾಗಲಿಲ್ಲ. ಒಬ್ಬ ಪುರುಷ ಸ್ತ್ರೀಯಾಗಿ,ಅದರಲ್ಲಿಯೂ ಬೊಚ್ಚುಬಾಯಿ ಮುದುಕಿಯಾಗಿ ಅಭಿನಯಿಸುವುದಿದೆಯಲ್ಲಾ ಅಬ್ಬಾ ಹೇಗೇ ವರ್ಣಿಸಲಿ?
ಹೆಣ್ಣಿನ ಸ್ವಾಂತಂತ್ರ್ಯವನ್ನು ಸೂಕ್ಷ್ಮವಾಗಿ ಪ್ರತಿಭಟಿಸುತ್ತಾ,ತನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗ ಕೊಡದಂತೆ ತಿರುಗಿ ನಿಲ್ಲುವ ಹೆಣ್ಣಿವಳು. ಪುಟ್ಟಮ್ಮತ್ತೆಯ ದುರಂತ ಕಥೆಯಲ್ಲಿ ಬರುವ ಇನ್ನೋರ್ವ ಜೀವವೇ ಮೊಮ್ಮಗಳು ರೆಬೆಲ್ ಎನ್ನಬಹುದಾದ 'ಅಮ್ಮಚ್ಚಿ'. ಹುಟ್ಟಿದಾರಭ್ಯ ಅಜ್ಜಿಯ ಮಡಿಲಲ್ಲಿ ಬೆಳೆದ ಅಮ್ಮಚ್ಚಿಗೆ ಅವಳದ್ದೇ ಆದ ಸಣ್ಣಪುಟ್ಟ ಆಸೆ ಕನಸುಗಳು ಹಲವಾರು. ತನ್ನ ಪುಟ್ಟ ಗೆಳತಿ ಸೀತೆಯೊಂದಿಗೆ ಮಾತನಾಡುತ್ತಾ ಸ್ತ್ರೀ ಸಂವೇದನೆಯನ್ನು ಮೆಲ್ಲನೆ ಮೀಟುವ ದಿಟ್ಟ ಹೆಣ್ಣು,ಕೊನೆಗೆ ಅನಿವಾರ್ಯವಾಗಿ ತನ್ನಿಚ್ಛೆಯ ವಿರುದ್ಧ ಅಪ್ಪನ ವಯಸ್ಸಿನವನೊಡನೆ ಮದುವೆಯಾಗಿ,ಅದಕ್ಕೆ ಶರಣಾಗುವ ರೀತಿ ಮನಕ್ಕೆ ತಾಕಿ ಬಿಡುತ್ತದೆ. ಕೊನೆಯ ತನಕ ಕಾಡುವ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದು 'ಲಹರಿ ತಂತ್ರಿ' ಎಂಬ ಪುಟ್ಟ ಹುಡುಗಿ.
'ಅಕ್ಕು' ನಾಟಕದಲ್ಲಿ ಹೆಚ್ಚಾಗಿ ಗಮನ ಸೆಳೆಯುವುದು ಅಭಿನಯ ವಿಭಾಗ. ಅಕ್ಕುವಿನ ಅಣ್ಣನಾಗಿ ಬಿ.ಜಿ.ರಾಮಕೃಷ್ಣರದು ಪಾತ್ರಕ್ಕೆ ತಕ್ಕ ಅಭಿನಯ,ವಾಸುವಿನ ಪಾತ್ರದಲ್ಲಿ 'ವಿಶ್ವನಾಥ ಉರಾಳ'ರ ಅಭಿನಯಕ್ಕೆ ಫುಲ್ ಮಾರ್ಕ್ಸ್. ವಾಸುವಿನ ಪಾತ್ರ ನೋಡಿದ ಮಲೆನಾಡು-ಕರಾವಳಿಯ ಯಾರಿಗಾದರೂ ತನ್ನ ಅಪ್ಪನೋ ಚಿಕ್ಕಪ್ಪನೋ ಮಾವನೋ ಲಕ್ಕಿಬೆರಲು ಹಿಡಿದು ಹೊಡೆಯಲು ಬಂದಿದ್ದು ನೆನಪಾಗದೇ ಇರಲಿಕ್ಕಿಲ್ಲ. ಶೇಷಮ್ಮನ ಪಾತ್ರದಲ್ಲಿ 'ಗೀತಾ ಸುರತ್ಕಲ್' ಅವರದು ಗಮನಾರ್ಹ್ ಅಭಿನಯ. ಪುಟ್ಟ ಮಾಣಿಯಾಗಿ ಅಭಿನಯಿಸಿದ 'ಅದಿತಿ ಉರಾಳ', ವೆಂಕಪ್ಪಯ್ಯನಾಗಿ 'ಪ್ರಕಾಶ್ ಶೆಟ್ಟಿ', ಅಜ್ಜನಾಗಿ 'ಎಸ್.ರಾಜಕುಮಾರ', ಹೀಗೇ ಹಲವರದು ಸಹಜ ಅಭಿನಯ. ಎಲ್ಲರ ಅಭಿನಯಕ್ಕೆ ಸಾಥ್ ಕೊಟ್ಟಿದ್ದು ಕಾಶಿನಾಥ್ ಪತ್ತಾರರ ಸಂಯೋಜನೆಯ ಹಿತವಾದ ಹಿನ್ನೆಲೆ ಸಂಗೀತ.. ಅದರಲ್ಲೂ 'ಜೋ ಜೋ ಲಾಲಿ' ಹಾಡಂತೂ ಮನೆಗೆ ಬಂದರೂ ಗುನುಗುವಂತಿದೆ, 'ಶವಕ್ಕೆ ಹಾಕುವ ಹೂವು' ಕೂಡ ಮನಮುಟ್ಟುವಂತಿದೆ. ಇದರ ಜೊತೆಗೆ ರಂಗವಿನ್ಯಾಸವೂ ಅಚ್ಚುಕಟ್ಟಾಗಿದೆ.
ಕುಂದಾಪುರ ಕಡೆಯ ಹವ್ಯಕ ಕನ್ನಡದ ಭಾಷೆಯನ್ನು ಅಳವಸಿಕೊಂಡ ನಾಟಕ ನೋಡಿ ಮುಗಿಸುವಷ್ಟರಲ್ಲಿ ಸಮಯವಾದುದೇ ತಿಳಿಯುವುದಿಲ್ಲ. ಪಾತ್ರ ಪರಿಚಯವೆಲ್ಲಾ ಮುಗಿದು ಜನರೆಲ್ಲಾ ಮನೆಗೆ ತೆರಳಲು ಎದ್ದರೂ ನಾವೆಲ್ಲೋ ನಮ್ಮ ಮನೆಯಲ್ಲೇ ಕುಳಿತಿದ್ದೆವೆ,ಅಕ್ಕ-ಪಕ್ಕದ ಮನೆಯ ಕಥೆಯನ್ನೇ ನೋಡುತ್ತಿದ್ದೆವೆ ಎಂಬಷ್ಟು ಸಹಜವಾದ ಅನುಭವ. ಯಾವ ಆಡಂಭರದ ಆಟಾಟೋಪವಿಲ್ಲದೆ.ಇಂತದ್ದೊಂದು ಅಮೋಘ ಅನುಭವವನ್ನು ಕಟ್ಟಿಕೊಡುವ ಕಲೆಯಿನ್ನೂ ರಂಗಭೂಮಿಯಲ್ಲಿ ಜೀವಂತವಾಗಿರುವುದು ಕಂಡು ಮನಸಲ್ಲಿ ಸಂತಸದ ಜೀಕು.
ಈ ನಾಟಕ ಮತ್ತೆ ಆಗಸ್ಟ್ 6ರಂದು ಭಾನುವಾರ ಮಧ್ಯಾಹ್ನ 3.30 ಗೆ ಮತ್ತು ಅದೇ ದಿನ ಸಂಜೆ 7.30 ಗೆ ಪ್ರದರ್ಶನಗೊಳ್ಳಲಿದೆ.ಕುಟುಂಬ ಸಮೇತ ನೀವೂ ಹೋಗಿ.ಇಂತದ್ದೊಂದು ಅನುಭವ ಕಟ್ಟಿಕೊಂಡು ಬನ್ನಿ.ರಂಗಭೂಮಿ ಕಲೆಯನ್ನೂ,ಕಲಾವಿದರನ್ನೂ ಪ್ರೋತ್ಸಾಹಿಸಿ..
-ಶುಭಶ್ರೀ ಭಟ್ಟ,ಬೆಂಗಳೂರು