Sunday 9 July 2017

ಮಿಂಚಾಗಿ ಬಸ್ಸು ಬರಲು..

ಮಿಂಚಾಗಿ ಬಸ್ಸು ಬರಲು..
  ನಾವಿದ್ದುದು ಕರಾವಳಿಯ ಕಡಲತೀರ ಕುಮಟೆಯಲ್ಲಿನ ಒಂದು ಸುಂದರವಾದ ಪುಟ್ಟಗ್ರಾಮದಲ್ಲಿ. ಹೊಳೆಗದ್ದೆ,ಗುಡಬಳ್ಳಿ,ಹರನೀರು,ತಲಗೋಡು ಒಂದಕ್ಕೊಂದು ಅಂಟಿಕೊಂಡಂತಿದ್ದ ಹಸಿರುಗ್ರಾಮ.ಎಲ್ಲಿ ನೋಡಿದರೂ ಮರಗಿಡ-ಸಣ್ಣಪುಟ್ಟ ಝರಿಗಳು,ಕಣ್ಣುಹಾಯಿಸಿದಷ್ಟೂ ದೂರ ಹಸಿರು,ಗುಡ್ಡದ ಮೇಲೆ ನಿಂತರೆ ಮೈತುಂಬಿ ನಿಂತ ಸಹ್ಯಾದ್ರಿ ಸಾಲುಗಳು.ಆ ಸಹ್ಯಾದ್ರಿಯ ಸಾಲುಗಳು ನನ್ನ ಕಣ್ಣಿಗೆ ಹರೆಯವೇ ಮೈದುಂಬಿಕೊಂಡು ನಿಂತ ಷೋಢಶಿಯಂತೆ ಕಾಣಿಸುತ್ತಿತ್ತು.ಏರುತಗ್ಗುಗಳಿದ್ದ ರಸ್ತೆ,ಕಿರಿದಾದ ಕೊರೆವ ದಾರಿಗಳು,ದಾರಿಗಂಟಿದಂತೆ ಮೈತಳೆದ ಗಿಡಮರಗಳ ಪೊದೆಸಾಲುಗಳು.ಮನೆಗೊಂದರಂತಿದ್ದ ಸೈಕಲ್,ಲೂನಾ,ಎಂ.ಎ.ಟಿಗಳೇ ಸಾರಿಗೆ ಸೌಕರ್ಯವೆನಿಸಿದ್ದ ಕಾಲವದು.ಹಣ್ಣು-ಹಣ್ಣು ಮುದುಕನಾದರೂ,ಚೊಚ್ಚಲ ಬಸುರಿಯಾದರೂ,ಹಸೀ ಬಾಣಂತಿ-ಶಿಶುವಿಗಾದರೂ ಇದ್ದ ಎಕೈಕ ಸಾರಿಗೆಯೆಂದರೆ 'ಗೋಪನ ರಿಕ್ಷಾ'.ನಮ್ಮಮ್ಮ-ಚಿಕ್ಕಮ್ಮರೆಲ್ಲರೂ ಅದರಲ್ಲೇ ಹೆರಿಗೆನೋವು ತಿನ್ನುತ್ತಾ ಕುಮಟೆ ಆಸ್ಪತ್ರೆಗೆ ತೆರಳಿದವರು.ಅದನ್ನು ಬಿಟ್ಟರೇ ಪರ್ಯಾಯ ಸಾರಿಗೆ ವ್ಯವಸ್ಥೆಯನ್ನೇ ಕಾಣದ ಗ್ರಾಮಗಳವು..
ಹೀಗಿರುವ ಗ್ರಾಮಕ್ಕೆ 'ಬಸ್ಸು' ಬರುವುದಂತೆ ಎಂಬ ಸುದ್ದಿಯೇ ರೋಮಾಂಚನಕಾರಿಯಾಗಿತ್ತು.ಹೊಂಡ-ತಗ್ಗುಗಳೆಲ್ಲಾ ಮುಚ್ಚುವಂತೇ ಡಾಂಬರಿನಲ್ಲಿ ಮೇಕಪ್ ಮಾಡಿಕೊಂಡ ರಸ್ತೆಯೂ,ತಿಂಗಳಲ್ಲಿ ಬಂದ ವರುಣನ ಆರ್ಭಟಕ್ಕೆ ಕೊಚ್ಚಿಹೋಗಿ ನಾಮಕಾವಸ್ಥೆ ಮಾಡಲ್ಪಟ್ಟ ಕಳಪೆ ಕಾಮಗಾರಿಯ ಕಥೆಯ ಸಾರಿ ಹೇಳುತ್ತಿತ್ತು. ನಂತರ ಗ್ರಾಮದ ಬಿಸಿರಕ್ತದ ಯುವಕರ ಸಂಘದವರು ತಂದ ಒತ್ತಡದಿಂದ,ರಸ್ತೆ ಸ್ವಲ್ಪಮಟ್ಟಿಗೆ ದುರಸ್ತಿಗೊಂಡಿತು.ಆಗಿನ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಯುತ ಶ್ರೀಪಾದ ಶೆಟ್ಟಿಯವರ ಸಹಕಾರದಿಂದ,ಗ್ರಾಮದವರು ಕೊಟ್ಟ ಅರ್ಜಿಯನ್ನು ಸಾರಿಗೆ ಸಂಸ್ಥೆ ಗಣನೆಗೆ ತೆಗೆದುಕೊಂಡು ಬಸ್ಸು ಬಿಡುವ ನಿರ್ಧಾರ ಕೈಗೊಂಡಿತು.
   ರಾಮನಿಗಾಗಿ ಶಬರಿ ಕಾದಂತೆ,ಬರುವ ಬಸ್ಸಿಗಾಗಿ ಕಾದು,ದಿನವೂ  'ಶಿರಿ ನಾಯ್ಕ'ನ ಅಂಗಡಿಯಲ್ಲಿ ವಿಚಾರಿಸಿ ಬೈಸಿಕೊಂಡಿದ್ದುಂಟು.ಇದರರ್ಥ ನಾವೆಂದೂ ಜೀವನದಲ್ಲೇ ಬಸ್ಸು ಕಾಣಲಿಲ್ಲವೆಂದಲ್ಲ.ಆದರೆ ನಮ್ಮೂರಿಗೆ ಬರುವ ಬಸ್ಸಿಗಾಗಿ ಆ ಆಸೆ-ಕೂತುಹಲ ಎಲ್ಲವೂ.ಕೊನೆಗೂ ಬಸ್ಸು ಬರುವ ದಿನ ನಿಕ್ಕಿಯಾಯ್ತು. ನಮ್ಮ ಆಸೆಗೆ ತಣ್ಣೀರೆರಚಬಾರದೆಂದು,ನಮ್ಮನ್ನೆಲ್ಲಾ ಅರ್ಧಘಂಟೆ ಮುಂಚಿತವಾಗಿಯೇ ಕಳುಹಿಸಿಕೊಟ್ಟರು ಶಾಲೆಯಿಂದ.ನಾನಂತೂ ನಮ್ಮನೆ ಕೆಲಸಕ್ಕೆ ಬರುತ್ತಿದ್ದ 'ಬೊಮ್ಮು ಗೌಡ'ನ ಬಳಿ ನನಗೊಂದು ಸೀಟ್ ಹಿಡಿಯಲು ಕೂಡ ಹೇಳಿಟ್ಟಿದ್ದೆ.ಬಸ್ಸಿನ ಹಾರನ್ ಕೇಳಿದೊಡನೆ ಮೈಯೆಲ್ಲಾ ಕಿವಿಯಾಗಿಸಿ ತುದಿಗಾಲಲ್ಲಿ ನಿಂತಿದ್ದೆವು. ನಮಗಿಂತಲೂ ಮೊದಲು ರಂಗೋಲಿ ಕೆಳಗೇ ನುಗ್ಗುವ ಬುದ್ಧಿಯಿರುವ ಉತ್ಸಾಹಿ ಯುವಕರಾಗಲೇ ಅರ್ಧ ಬಸ್ಸಿನ ತುಂಬ ಕುಳಿತಿದ್ದರು.ಕುಮಟೆಯ ಡೀಪೋವಿನಲ್ಲಿಯೇ ಹೊಂಚುಹಾಕಿ ಕಳ್ಳಬೆಕ್ಕಂತೆ ಹತ್ತಿದ್ದರಾ ಗೊತ್ತಿಲ್ಲ.ರಿಪೇರಿಗೆ ಬಿದ್ದ ಹಳೆಯ ಕೆಂಬಣ್ಣದ ಬಸ್ಸನ್ನು ಬಿಡುತ್ತಾರೆಂದು ಅಂದುಕೊಂಡಿದ್ದ ನಮಗೆ.ಬೆಂಗಳೂರಿಗೆ ಓಡಿಸಲ್ಪಡುತ್ತಿದ್ದ,ಹಳೆಯದಾದರೂ ಚೆಂದವಿದ್ದ ಬಸ್ಸು ಕಂಡು ಮನವರಳಿತ್ತು.ಸೇವಂತಿಹಾರ,ಮಲ್ಲಿಗೆ ಮಾಲೆ,ನಿಂಬೆಹಣ್ಣು-ಮಾವಿನೆಲೆಯ ತೋರಣಗಳಿಂದ ಕಂಗೊಳಿಸುತ್ತಿದ್ದ ಬಸ್ಸು ಸಿಂಗರಿಸಿಕೊಂಡ ಮುದಿ ಮುತ್ತೈದೆಯಂತೆ ಕಾಣುತ್ತಲಿತ್ತು. ಅಂತೂ ಬೊಮ್ಮುವಿನ ಸಹಾಯದಿಂದ ದೊರಕಿದ ಸೀಟಿನಲ್ಲಿ ರಾಣಿಯ ಹಾಗೇ ಕುಳಿತು ಪ್ರಯಾಣಿಸಿದ್ದೆ. ಸೀಟು ಸಿಕ್ಕಿದ್ದಕ್ಕೆ ಖುಷಿಯಿತ್ತಾ,ಬಸ್ಸು ಬಂದಿದ್ದಕ್ಕೆ ಹೆಮ್ಮೆಯಿತ್ತಾ ನೆನಪಿಲ್ಲ.ಆದರೆ ಜಂಭದಿಂದ ಒಂದೆರಡೂ ಸುತ್ತು ದಪ್ಪವಾಗಿದ್ದಂತೂ ನಿಜ..
      ಅಮ್ಮ ಕೊಟ್ಟ ಕಾಸು ಖಾಲಿಯಾದರೂ ಬಸ್ಸಲ್ಲೇ ಕುಳಿತು ಮರುಪ್ರಯಾಣಿಸುತ್ತಿದ್ದ ನನಗೆ ಬೊಮ್ಮುವಿದ್ದಾನೆಂಬ ಧೈರ್ಯ.ಆದರೆ ಬೊಮ್ಮುವಲ್ಲೇ ಇಳಿದುಹೋಗಿ, ಟಿಕೆಟ್ ಕೊಳ್ಳಲು ಕಾಸಿಲ್ಲದೇ ಮುಖಬಾಡಿಸಿ ಕುಳಿತಾಗ, ಅದೆಲ್ಲಿಂದಲೋ ಬಂದ ಸಂತು ಅಣ್ಣ ಟಿಕೆಟ್ ಕೊಡಿಸಿ,ಕಂಡಕ್ಟರಿಂದ ಬೈಯುವುದನ್ನು ತಪ್ಪಿಸಿದ.ಹೀಗೆ ಒಂದು ವಾರಗಳ ಕಾಲ ಅಬಾಲವೃದ್ಧರಾಗಿ ಎಲ್ಲರೂ ಕಾರಣವಿಲ್ಲದೇ ಬಸ್ಸಲ್ಲಿ ಓಡಾಡತೊಡಗಿದರು.ಆದರೆ ಇದರ ಆಕರ್ಷಣೆ ಕೇವಲ ಕೆಲದಿನಗಳಷ್ಟೇ ಎಂದರಿಯದ ಸಾರಿಗೆಯವರು,ದಿನಕ್ಕೆರಡು ಬಸ್ಸು ಬಿಡುವ ವ್ಯವಸ್ಥೆ ಮಾಡಿದರು.ಸಮಯಕ್ಕೆ ಸರಿಯಾಗಿ ಬರತೊಡಗಿದ್ದ ಬಸ್ಸಿಗೆ ದಿನಕಳೆದಂತ ಜನ ಕಡಿಮೆಯಾಗ ತೊಡಗಿದರು.ಕೊನೆ-ಕೊನೆಗೆ ಬೆರಳೆಣಿಕೆಯಷ್ಟು ಜನರಿಗೆ,ಮನೆಮುಂದೆ ನಿಂತ ಚಿಣ್ಣಾರಿಗಳು ಮಾಡುವ ಟಾಟಾಗಳಿಗಷ್ಟೇ ಸಾಕ್ಷಿಯಾಗಬೇಕಾದ ಪರಿಸ್ಥಿತಿ ಬರತೊಡಗಿತ್ತು.ಮೈಲುಗಟ್ಟಲೇ ಬರಿಗಾಲಲ್ಲಿ ನಡೆದು ಅಭ್ಯಾಸವಾಗಿದ್ದ ಶ್ರಮಜೀವಿ ಹಳ್ಳಿಗರಿಗೆ,ಈ ಸಾರಿಗೆ ವ್ಯವಸ್ಥೆ ಅಷ್ಟಾಗಿ ಹಿಡಿಸಲಿಲ್ಲ.ಬಸ್ಸು ಬರುತ್ತಿದ್ದರೂ, ಅದನ್ನು ಹಿಂದಿಕ್ಕುವಂತೆ ಬಿರುಸಾಗಿ ನಡೆಯುತ್ತಿದ್ದ ಮುದುಕರು,ಹೆಂಗಸರು ಸಾರಿಗೆಯವರಿಗೆ ಸವಾಲಾದರು.ಒಂದಿನೀತೂ ಲಾಭವಿಲ್ಲದೇ ನಡೆಸುವ ಸಾರಿಗೆ ವ್ಯವಸ್ಥೆ ಅವರಿಗೆ ಬೇಡವಾಗಿತ್ತು.ಕೊನೆಗೊಂದು ದಿನ ಬಸ್ಸು ಬರುವುದು ಸಂಪೂರ್ಣವಾಗಿ ನಿಂತಿತು.
      ಬಸ್ಸು ಬರುವುದೋ ಬಿಡುವುದೋ ತಲೆಬಿಸಿಯಿರಲಿಲ್ಲ,ಅದರಿಂದಾದ ನಷ್ಟದ ಬಗ್ಗೆಯೂ ಯಾರಿಗೂ ಯೋಚನೆಯಿಲ್ಲ.ಆದರೆ ಇದರ ದೆಸೆಯಿಂದ ಡಾಂಬರು ರಸ್ತೆಯಂತೂ ಆಯ್ತು.ಇದರಿಂದ ಅನಾರೋಗ್ಯದ ಜನರಿಗೆ,ಬಸುರಿ ಬಾಣಂತಿಯರಿಗೆ ತಿರುಗುವ ಹಾದಿ ಸುಗಮವಾಯ್ತು.ಈಗಂತೂ ಮನೆಗೊಂದು ಕಾರಿದೆ, ಜನಕ್ಕೊಂದು ಮೋಟಾರು ಬೈಕಿದೆ.ಆದರೂ ನನ್ನಂತಹ ಅನೇಕರಿಗೆ ನಮ್ಮೂರಿಗೆ ಬಂದ ಮೊದಲ ಬಸ್ಸಿನ ಅನುಭವ ಮರೆಯಲಾಗಲಿಲ್ಲ.
-ಶುಭಶ್ರೀ ಭಟ್ಟ,ಬೆಂಗಳೂರು

No comments:

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...